ಬುಧವಾರ, ಮಾರ್ಚ್ 14, 2012

ಭೀಮಣ್ಣ ಗಜಾಪುರ

ಟಿಪ್ಪಣಿ: ಅರುಣ್

ಬಾರಿಕರ ಭೀಮಪ್ಪ ಭೀಮಣ್ಣ ಗಜಾಪುರ ಆದ ಪಯಣದ ಕಥೆಯೇ ಸೊಗಸಾಗಿದೆ.

ಬಾರಿಕರ ಭರಮಪ್ಪ, ಬಾರಿಕರ ಗೌರಮ್ಮರ ಮಗನಾದ ಭೀಮಣ್ಣ ಹಳ್ಳಿ ಹುಡುಗರ ಸಾಮಾನ್ಯ ಬವಣೆಯನ್ನು ಅನುಭವಿಸಿಯೇ ಬಂದವರು. ಕಡು ಬಡತನ, ಅನಕ್ಷರಸ್ತ ಕುಟುಂಬದಲ್ಲಿ ೧೯೭೪ ರಲ್ಲಿ ಜನಿಸಿದ ಭೀಮಣ್ಣ ಗಜಾಪುರ ೦೧ ರಿಂದ ೦೪ ನೇ ತರಗತಿಯವರೆಗೆ ಸ.ಕಿ.ಪ್ರಾ. ಶಾಲೆ ಗಜಾಪುರದಲ್ಲಿ ಕಲಿತು ನಂತರ ೦೫ ನೇ ತರಗತಿಯನ್ನು ಕಂದಗಲ್ಲು ಗ್ರಾಮದ ಸ.ಹಿ.ಪ್ರಾ.ಶಾಲೆಯಲ್ಲಿ ಪೂರೈಸಿ ನಂತರ ೦೬ ರಿಂದ ೦೭ ನೇ ತರಗತಿಯನ್ನು ಕೊಟ್ಟೂರಿನ ಶ್ರೀ ನಾಗರಾಜ ಸ.ಹಿ.ಪ್ರಾ.ಶಾಲೆಯಲ್ಲಿ ಓದಿ ನಂತರ ಹೈಸ್ಕೂಲ್ ಶಿಕ್ಷಣವನ್ನು ಕೊಟ್ಟೂರಿನ ಶ್ರೀ ಕೋಲಶಾಂತೇಶ್ವರ ಪ್ರೌಡಶಾಲೆಯಲ್ಲಿ ಪೂರೈಸಿದರು. ಕಾಲೇಜು ಶಿಕ್ಷಣವನ್ನು ಪಿ.ಯು.ಸಿ ಯಿಂದ ಬಿ.ಎ ವರೆಗೆ ಕೊಟ್ಟೂರಿನ ಶ್ರೀ ಗುರುಕೊಟ್ಟೂರೇಶ್ವರ ಮಹಾವಿದ್ಯಾಲಯದಲ್ಲಿ ವ್ಯಾಸಾಂಗ ಮಾಡಿದ್ದು, ಇದೇ ಸಮಯದಲ್ಲಿ ಎನ್.ಸಿ.ಸಿ ಬಿ ಸರ್ಟಿಫಿಕೇಟ್ ಪಾಸ್ ಮಾಡಿ ಎನ್.ಎಸ್.ಎಸ್ ತರಬೇತಿ ಸಹ ಪಡೆದಿರುತ್ತಾರೆ. ಶಾಲಾ ದಾಖಲಾತಿಗಳಲ್ಲಿ ಬಾರಿಕರ ಭೀಮಪ್ಪ ಎಂದು ಹೆಸರು ಇದ್ದರೂ ಇವರು ಭೀಮಣ್ಣ ಗಜಾಪುರ ಎಂದು ಬರೆಯುತ್ತಾ ಬರೆಯುತ್ತಾ ಬಾರಿಕರ ಭೀಮಪ್ಪ ಭೀಮಣ್ಣ ಗಜಾಪುರವೇ ಆದರು.

ಎಂ ಎ ಪತ್ರಿಕೋದ್ಯಮ ಪದವಿಯನ್ನು ಹಂಪಿ ವಿಶ್ವವಿದ್ಯಾನಿಲಯದಿಂದ ಪಡೆದಿದ್ದು, ೧೯೯೫ ರಿಂದ ೨೦೧೦ ರವರೆಗೂ ನಿರಂತರವಾಗಿ ಫ್ರೀಲಾನ್ಸ್ ಪರ್ತಕರ್ತನಾಗಿ ಪ್ರಜಾವಾಣಿ, ಕನ್ನಡ ಪ್ರಭ, ಸಂಯುಕ್ತ ಕರ್ನಾಟಕ, ಉದಯವಾಣಿ, ವಿಜಯ ಕರ್ನಾಟಕ, ಸಂಜೆವಾಣಿ, ಸುಧಾ, ಕರ್ಮವೀರ, ತುಷಾರ, ಸಖಿ ಮುಂತಾದ ಪತ್ರಿಕೆಗಳು ಮತ್ತು ಮ್ಯಾಗಜಿನ್‌ಗಳಿಗೆ ೨೦೦ ಕ್ಕೂ ಹೆಚ್ಚು ಚಿತ್ರ-ಲೇಖನಗಳನ್ನು ದಣಿವಿಲ್ಲದೆ ಬರೆದಿದ್ದಾರೆ. ಅಲ್ಲದೆ ವಿಜಯ ಕರ್ನಾಟಕ ದಿನ ಪತ್ರಿಕೆಯ ಕೂಡ್ಲಿಗಿ ತಾಲ್ಲೂಕು ಪರ್ತಕರ್ತರಾಗಿ ೨೦೦೨ ರಿಂದ ೨೦೦೪ ರವರೆಗೆ ಒಟ್ಟು ೦೨ ವರ್ಷ ಸೇವೆ ಸಲ್ಲಿಸಿದ್ದು, ನಂತರ ಜೂನ್ ೨೦೦೪ ರಿಂದ ಕನ್ನಡ ಪ್ರಭ ಪತ್ರಿಕೆ ವರದಿಗಾರರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ಶ್ರೀಗುರು ಕೊಟ್ಟೂರೇಶ್ವರ, ಉಜ್ಜಯಿನಿ ಪೀಠದ ಶ್ರೀ ಮರಳುಸಿದ್ದೇಶ್ವರ ಸ್ವಾಮಿ, ಕೂಲಹಳ್ಳಿ ಗೋಣಿ ಬಸವೇಶ್ವರ , ಗಾಣಗಟ್ಟ ಮಾಯಾಮ್ಮ, ಮಡ್ರಹಳ್ಳಿ ಚೌಡಮ್ಮ, ಗುಡಗೇರಿ ಧ್ಯಾಮವ್ವ ಸೇರಿದಂತೆ ಹತ್ತಾರು ಧಾರ್ಮಿಕ ಸ್ಥಳಗಳ ಚರಿತ್ರೆಗಳ ಆಡಿಯೋ ಮತ್ತು ವಿಡಿಯೋ ಕ್ಯಾಸೇಟ್‌ಗಳಿಗೆ ೨೦೦ ಕ್ಕೂ ಹೆಚ್ಚು ಭಕ್ತಿಗೀತೆಗಳನ್ನು ರಚಿಸಿದ್ದು, ಇತ್ತೀಚೆಗೆ ಬಿಡುಗಡೆಯಾದ ಕೊಟ್ಟೂರು ದೊರೆ ಕ್ಯಾಸೇಟ್‌ನಲ್ಲಿ ಭೀಮಣ್ಣ ಗಜಾಪುರ ರಚಿಸಿದ ಸಾಹಿತ್ಯಕ್ಕೆ ಗಾಯಕ ಎಸ್.ಪಿ ಬಾಲಸುಬ್ರಮಣ್ಯಂ ಹಾಡಿರುವುದು ವಿಶೇಷ. ಕೂಡ್ಲಿಗಿ ತಾಲೂಕು ಬಳ್ಳಾರಿ ಜಿಲ್ಲೆಯಲ್ಲಿ ಭೀಮಣ್ಣ ಗಜಾಪುರ ಎಂದರೆ ಯಾರಾದರೂ ಗುರುತಿಸುವ ಹಂತಕ್ಕೆ ಭೀಮಣ್ಣ ತಲುಪಿದ್ದಾರೆ.

ಭೀಮಣ್ಣ ಬಿಸಿಲ ಬಸಿರು ಎನ್ನುವ ಕವನ ಸಂಕಲನ ಪ್ರಕಟಸಿದ್ದರೂ ಅವರು ಕವಿಯಾಗಿ ಯಶ ಕಂಡಿಲ್ಲ. ಕಾರಣ ಅವರ ಪತ್ರಿಕೋದ್ಯಮದ ಬರಹದ ಪ್ರಭಾವವೂ ಇರಬಹುದು. ಅವರ ಈಚಿನ ನೋವಿನ ಬಣ್ಣಗಳು ಕೃತಿಯಲ್ಲಿ ಗ್ರಾಮೀಣ ಪತ್ರಿಕೋದ್ಯಮದ ಭಿನ್ನ ಎಳೆಗಳನ್ನು ಕಾಣಬಹುದು. ಇಲ್ಲಿ ಒಬ್ಬ ಸಂವೇದನಾಶೀಲ ಪತ್ರಕರ್ತನ ಹುಡುಕಾಟದ ಭಿನ್ನ ಮಾದರಿಗಳು ಕಾಣುತ್ತವೆ. ಭೀಮಣ್ಣ ಅಲ್ಪತೃಪ್ತರು. ಇಲ್ಲಿನ ಬರಹಳಗ ಬೆನ್ನು ಹತ್ತಿ ಮತ್ತಷ್ಟು ಮಾಹಿತಿ ಕಲೆಹಾಕಿದರೆ, ಇವು ಕೇವಲ ವರದಿ ಮಾತ್ರವಲ್ಲದೆ, ಸಂಶೋಧನ ಲೇಖನಗಳೂ ಆಗುವ ಸಾದ್ಯತೆ ಇದೆ. ಈ ಬಗ್ಗೆ ಭೀಮಣ್ಣ ಅವರು ಆಲೋಚಿಸುವುದು ಒಳ್ಳೆಯದು. ಮತ್ತೊಂದು ಮಿತಿಯೆಂದರೆ ಅವರ ಬಳಸುವ ಭಾಷೆಯೂ ತೀರಾ ಹೊಸತಾಗಿರದೆ ಪುನರಾವರ್ತನೆ ಎದ್ದು ಕಾಣುತ್ತದೆ. ಬಹುಶಃ ಪತ್ರಿಕೆಗೆ ಬರೆಹ ಬರೆದ ಕಾರಣಕ್ಕೂ ಈ ಮಿತಿ ಇರಲಿಕ್ಕೆ ಸಾದ್ಯವಿದೆ. ಇನ್ನಷ್ಟು ಓದು ಸಾದ್ಯವಾದರೆ ಭೀಮಣ್ಣ ಈ ಮಿತಿಯನ್ನು ಮೀರಲು ಸಾದ್ಯವಿದೆ.

ಇಂತಹ ಮಿತಿಗಳ ಆಚೆಯೂ ಬಾರಿಕರ ಭೀಮಪ್ಪ ಬೀಮಣ್ಣ ಗಜಾಪುರ ಆಗಿ ಇನ್ನು ಬರೆಯುವುದು ಬಹಳ ಇದೆ. ಅವರ ಬರಹ ಮತ್ತಷ್ಟು ಸೂಕ್ಷ್ಮತೆಗೆ ತೆರೆದುಕೊಳ್ಳಲಿ.



ವಿಳಾಸ
: ಗಜಾಪುರ [ಪೊ] ಕೂಡ್ಲಿಗಿ [ತಾ]
ಬಳ್ಳಾರಿ ಜಿಲ್ಲೆ ಪಿನ್ ನಂ :-೫೮೩೧೩೪
ಪೋ:೯೪೪೮೭೧೭೫೧೮

ಭೀಮಣ್ಣ ಅವರ ಬರಹದ ಒಂದು ಮಾದರಿ:

ಹರಿದು ಬಂದಳು ಗಂಗೆ ಗೌರೀಪುರಕ್ಕೆ

ಆ ಹಳ್ಳಿ ಹಾಗೇ ಇತ್ತು. ನಮ್ಮ ದೇಶದ ಕುಗ್ರಾಮವೊಂದನ್ನು ಪ್ರತಿನಿದಿsಸುವ ಹಾಗೆ. ರಸ್ತೆ ಸರಿ ಇಲ್ಲ, ಬಸ್ಸೂ ಇಲ್ಲ, ಆಸ್ಪತ್ರೆ ದೂರದ ಮಾತು. ದೂರವಾಣಿಯ ಸೌಲಭ್ಯವಿಲ್ಲ. ಅವೆಲ್ಲ ಬಿಡಿ, ಕನಿಷ್ಟ ಕುಡಿಯುವ ನೀರಿನ ಸೌಲಭ್ಯ? ಅದೂ ಇಲ್ಲ ಎಂದರೆ ಆ ಊರಿನ ಜನರ ಬದುಕಿನ ಪರಿ ಅಲ್ಲಿ ಹೇಗಿದ್ದೀತು?

ದಾವಣಗೆರೆ ಜಿಲ್ಲೆ ಹರಪನಹಳ್ಳಿ ತಾಲೂಕಿಗೆ ಸೇರಿದ ಗೌರೀಪುರದ ಚಿತ್ರಣವಿದು. ಈ ಹಳ್ಳಿಯ ಜನತೆಯ ನಿತ್ಯ ವ್ಯವಹಾರವೆಲ್ಲ ಬಳ್ಳಾರಿ ಜಿಲ್ಲೆಯ ಹತ್ತಿರದ ಕೊಟ್ಟೂರಿನಲ್ಲಿ. ಸುಮಾರು ನಾಲ್ಕು ವರ್ಷದಿಂದಲೂ ದೂರವಾಣಿಗೆ ಅರ್ಜಿ ಸಲ್ಲಿಸಿದ್ದರೂ ಗೌರೀಪುರ, ಬಳಿಗಾನೂರು, ಕೆಸರಹಳ್ಳಿ, ಬಸವನಾಳು ಗ್ರಾಮಗಳಿಗೆ ಇದುವರೆಗೂ ದೂರವಾಣಿ ಸೌಲಭ್ಯ ಇಲ್ಲ. ರಸ್ತೆ ಇದ್ದರೂ ಬಸ್ಸುಗಳ ಓಡಾಟ ಇಲ್ಲ. ಇಲ್ಲಿಯ ಐದಾರು ಹಳ್ಳಿಗಳ ಜನತೆಗೆ ಆಸ್ಪತ್ರೆಯಂತೂ ಕನಸಿನ ಮಾತು. ಗ್ರಾಮದ ನೀರಿನ ಸಮಸ್ಯೆ ವರ್ಷದಿಂದ ವರ್ಷಕ್ಕೆ ಇದು ಉಲ್ಬಣ ಗೊಳ್ಳುತ್ತಿದ್ದರೂ ಜನಪ್ರತಿನಿದಿsಗಳಿಗೆ ಲಕ್ಷ್ಯವೇ ಇಲ್ಲ.

ಮುಂದೇನು ಎಂದು ಗೌರೀಪುರದ ಜನ ಚಿಂತಿಸಿದರು. ಸರಿ ಹೀಗೊಂದು ಪ್ರಯತ್ನ ಮಾಡೇ ಬಿಡುವ ಎಂದು ಗೌರೀಪುರದ ಎ.ಪಿ.ಎಂ.ಸಿ. ಸದಸ್ಯ ಬಿ. ವಸಂತನಗೌಡರು ಊರ ಜನರನ್ನು ಸಂಘಟಿಸಿದರು. ಅವರ ನೇತೃತ್ವದಲ್ಲಿ, ಜನರ ಶಕ್ತ್ಯಾನುಸಾರ ಹಣ ಸಂಗ್ರಹಿಸಿದರು. ಅಂತೂ ಇಂತೂ ಮುವತ್ತು ಸಾವಿರ ರೂಪಾಯಿಗಳು ಸಂಗ್ರಹವಾದವು. ಒಂದು ಶುಭಮುಹೂರ್ತದಲ್ಲಿ ಕೊಳವೆ ಬಾವಿಯನ್ನು ಕೊರೆಸಲು ಶುರು ಮಾಡಿದರು. ನೆಲ ಬಗೆದ ಕೊಳವೆ ತಂಪು ನೀರನ್ನು ಚಿಮ್ಮಿಸಿದಾಗ ನೆರೆದಿದ್ದ ಗ್ರಾಮಸ್ಥರ ಹರ್ಷ ಮುಗಿಲು ಮುಟ್ಟಿತ್ತು.

ಗೌರೀಪುರದ ಜನತೆ ಚುರುಕಾದರು. ಮಾರನೇ ದಿನವೇ ಮೋಟರ್ ಖರೀದಿಸಿ, ಕೊಳವೆ ಬಾವಿಗೆ ಇಳಿಸಿದರು. ಪಕ್ಕದ ಹಳೆಯ ನೀರು ಸರಬರಾಜಿನ ವಿದ್ಯುತ್ ಕಂಬಕ್ಕೆ ವಿದ್ಯುತ್ ಸ್ಟಾರ್ಟರ್ ಜೋಡಿಸಿದರು. ಸ್ವಿಚ್ ಅದುಮಿದರು. ಹಗರಿಯ ಪಕ್ಕದಲ್ಲಿ ನೀರು ಸುಮಾರು ಮಾರುದ್ದ ಜಿಗಿಯುತ್ತಿತ್ತು. ಊರ ಜನರೆಲ್ಲಾ ನೀರನ್ನು ನೋಡಿ ಖುಷಿಪಟ್ಟರು, ಅಂದೇ ಸಮೀಪದ ಊರಿಗೆ ಸರಬರಾಜು ಆಗುವಂತೆ ಪೈಪ್ ಹಾಕಲು ಊರವರೇ ಗುಂಡಿ ಅಗೆದರು. ಪೈಪು ಹಾಕಿದರು. ಸಿಹಿಯಾದ ನೀರು ಸದ್ದಿಲ್ಲದೇ ಮನೆ ಮನೆಯ ಹಂಡೆಗಳಲ್ಲಿ, ಕೊಡಗಳಲ್ಲಿ ತುಂಬಿದಾಗ ಗೌರೀಪುರದ ತುಂಬೆಲ್ಲ ಬರೀ ಗಂಗೆಯದೇ ಮಾತು.


"ನೋಡ್ರಿ ಸಾರ್, ನಮ್ಮೂರಿಗೆ ಕೇವಲ ಮುವ್ವತ್ತು ಸಾವಿರ ಖರ್ಚಿನಲ್ಲೇ, ಬೋರ್, ಮೋಟರ್, ಪೈಪ್‌ಲೈನ್ ಎಲ್ಲಾ ಕೆಲಸ ಮಾಡಿದಿವಿ. ಸರಕಾರ ಆಗಿದ್ರ, ಇಷ್ಟೇ ಕೆಲಸಕ್ಕೆ ಲPಂತರ ಹಣ ಖರ್ಚು ಮಾಡೀವಿ ಅಂತ ಲೆಕ್ಕ ತೋರಿಸ್ತಿತ್ತು"ಎನ್ನುತ್ತಾರೆ ಗೌರೀಪುರದ ನಾಗಪ್ಪ.

"ಅಲ್ರೀ ಸಾರ್, ಒಂದು ಲಕ್ಷನೇ ಖರ್ಚು ಮಾಡಿದ್ರೂ ಒಂದು ಬೋರ್ ಹಾಕ್ಸಿ ಊರಿಗೆ ನೀರು ಕೊಡ್ಲಿಕ್ಕೆ ಇನ್ನೂ ಒಂದು ವರ್ಷ ಬೇಕಾಗ್ತಿತ್ತೇನೋ ಅದಕ್ಕೆ ನಮ್ಮೂರಿನ ಜನಕ್ಕೆ, ದನಕ್ಕೆ ನೀರು ಸಿಗೋದಿಲ್ಲ ಅಂತ ನಾವೇ ಊರಿನ ಜನರತ್ರ ಅವ್ರವ್ರ ಸ್ಥಿತಿಗತಿ ಮೇಲೆ ಹಣ ಸಂಗ್ರಹಿಸಿ ಮುವ್ವತ್ತು ಸಾವಿರ ಕೂಡ್ಸಿ ನೀರು ಹರಿಸೀವಿ ನೊಡ್ರಿ" ಎನ್ನುತ್ತಾರೆ ಊರಿನ ಮುಖಂಡ ಬಿ. ವಸಂತನಗೌಡ.
ಹಿಂದೆ ಈ ಊರಿನಲ್ಲಿ ಸರಕಾರದ ಕಿರುನೀರು ಸರಬರಾಜು ಯೋಜನೆಯಲ್ಲಿ ಕೊಳವೆ ಬಾವಿಯನ್ನು ಕೊರೆಸಲಾಗಿತ್ತು. ಇವತ್ತು ಮೋಟರ್ ಇಳಿಸ್ತಾರೋ ನಾಳೇ ಇಳಿಸ್ತಾರೋ ಎಂದು ಜನ ನಾಲ್ಕು ತಿಂಗಳು ಕಾದಿದ್ದೇ ಕಾದದ್ದು. ಸರಕಾರ ಮಾತ್ರ ಕಣ್ಣುಮುಚ್ಚಿ ಕುಳಿತುಬಿಟ್ಟಿತ್ತು. ಆಗಲೇ ಗೌರೀಪುರದ ಜನತೆ ಸರ್ಕಾರಿ ಕೊಳವೆ ಬಾವಿಯ ಆಸೆಗೆ ಎಳ್ಳು ನೀರು ಬಿಟ್ಟು, ತಾವೇ ಕೊಳವೆ ಬಾವಿ ಕೊರೆಸಲು ಮುಂದಾಗಿದ್ದು. ಹಣ ಖರ್ಚು ಮಾಡಿದ ಊರಿನವರಿಗೆ ಸರಕಾರ ಕಿರು ನೀರು ಸರಬರಾಜು ಯೋಜನೆಯಡಿ ಮಂಜೂರಾದ ಹಣವನನು ಕೊಡುತ್ತಾರೆಯೋ ಇಲ್ಲವೋ ಎನ್ನುವ ಅಳುಕಿದೆ. ಆ ಅಳುಕಿನ ಜತೆಗೇ ಈ ಕೊಳವೆ ಬಾವಿಗೂ ಮೋಟರ್ ಅಳವಡಿಸಿ ನೀರನ್ನು ಹರಿಸಬಹುದೆಂಬ ದೂರದ ಆಸೆಯೂ ಇದೆ.
ಗ್ರಾಮಸ್ಥರ ಭರವಸೆಯನ್ನು ಸರ್ಕಾರ ಸಾರ್ಥಕ ಮಾಡುತ್ತದೋ ನಿರರ್ಥಕ ಮಾಡುತ್ತದೋ ಕಾಲವೇ ಹೇಳಬೇಕು.
ಪ್ರಜಾವಾಣಿ, ಕರ್ನಾಟಕ ದರ್ಶನ
೨.೪.೨೦೦೩

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ